ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು 30ನೇ ವಾರ್ಷಿಕ ಅಧಿವೇಶನ ಉದ್ಘಾಟನೆ




ಬೈಂದೂರು:ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ ವತಿಯಿಂದ 30ನೇ ವಾರ್ಷಿಕ ಅಧಿವೇಶನ,ಪ್ರತಿಭಾ ಪುರಸ್ಕಾರ,ಸನ್ಮಾನ ಹಾಗೂ ಅಭಿನಂದನೆ ಕಾರ್ಯಕ್ರಮ ಕಿರಿಮಂಜೇಶ್ವರ ಗುರುನರಸಿಂಹ ಸಭಾಭವನದಲ್ಲಿ ಭಾನುವಾರ ನಡೆಯಿತು.ಗಣಹೋಮ ಜರುಗಿತು.
ವಾರ್ಷಿಕ ಅಧಿವೇಶನದ ಅಂಗವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪೂಜಾ ಕಾರಂತ,ಐಶ್ವರ್ಯ ವೈದ್ಯ,ಕವನಾ ನಾವಡ,ಪ್ರಮಥ ಶ್ಯಾನುಭೋಗ್,ಪ್ರಣವ್ ಅಡಿಗ ಅವರಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು ಹಾಗೂ ಸಾಧಕರಾದ ಮಂಜುನಾಥ ಮಯ್ಯ,ಗಾಯತ್ರಿ ಭಟ್ ಮೊಗೇರಿ,ವಿದ್ಯಾಶ್ರೀ ಮಯ್ಯ,ಗುರುರಾಜ್ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು.ವಲಯದ ವಿಪ್ರರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯ ವಾರ್ಷಿಕ ಮಹಾಸಭೆ ಪರಿಷತ್ತಿನ ಅಧ್ಯಕ್ಷ ಯು ಸಂದೇಶ್ ಭಟ್ ನೇತೃತ್ವದಲ್ಲಿ ಜರುಗಿತು.
ಅಗಲಿದ ಸಮಾಜ ಬಾಂಧವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಉಪಾಧ್ಯಕ್ಷ ಕೃಷ್ಣಾನಂದ ಚಾತ್ರ ಅವರು ವಾರ್ಷಿಕ ಅಧಿವೇಶನವನ್ನು ಉದ್ಘಾಟಿಸಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ,ಆಧುನಿಕ ಯುಗದಲ್ಲಿ ಯುವ ಸಮುದಾಯ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಕೊಂಡು ಮುಂದಿನ ಪೀಳಿಗೆಗೆ ಆಚಾರ ವಿಚಾರಗಳನ್ನು ವರ್ಗಾವಣೆ ಮಾಡುವಂತಹ ಜವಾಬ್ದಾರಿ ಹೊರ ಬೇಕೆಂದು ಹೇಳಿದರು.
ನಿವೃತ್ತ ಸೈನಿಕ ಚಂದ್ರಶೇಖರ ನಾವಡ ಅವರು ಉಪನ್ಯಾಸ ನೀಡಿ ಮಾತನಾಡಿ,ವಿಪ್ರ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಇಂತಹ ಅಧಿವೇಶನಗಳು ಬಹಳಷ್ಟು ಸಹಕಾರಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.ಶಿಸ್ತು ಸಂಮಯ ಶಿಷ್ಠಾಚಾರ ಸಂಸ್ಕಾರ ಎನ್ನುವ ಅಂಶಗಳನ್ನು ಇಂದಿನ ಯುವ ಸಮುದಾಯ ಅಳವಡಿಸಿಕೊಂಡು ಬದುಕಬೇಕೆಂದು ಕಿವಿ ಮಾತನ್ನು ಹೇಳಿದರು.
ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯ ಅಧ್ಯಕ್ಷ ಯು ಸಂದೇಶ್ ಭಟ್ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ,ಚಟುವಟಿಕೆಗಳ ಸದಸ್ಯರುಳ್ಳ ತಂಡವನ್ನು ರಚಿಸುವ ಅಗತ್ಯತೆ ಬಹಳಷ್ಟಿದ್ದು.ಸಂಘಟನೆಗಳ ಕಾರ್ಯದಲ್ಲಿ ಸಮುದಾಯದ ಸಮಾಜ ಬಾಂಧವರ ಭಾಗವಹಿಸುವಿಕೆ ಮಹತ್ವದ್ದಾಗಿರುತ್ತದೆ ಎಂದು ಹೇಳಿದರು.ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯ ಗೌರಾವಾಧ್ಯಕ್ಷ ಅರುಣ್ ಶ್ಯಾನುಭಾಗ್,ಮಹಿಳಾ ವೇದಿಕೆ ವೀಣಾ ಹೆಬ್ಬಾರ್,ಯುವ ವೇದಿಕೆ ಅಧ್ಯಕ್ಷ ಪದ್ಮನಾಭ ಹೆಬ್ಬಾರ್ ಉಪಸ್ಥಿತರಿದ್ದರು.
ವಾರ್ಷಿಕ ಮಹಾಸಭೆಯಲ್ಲಿ ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯ ಕಾರ್ಯದರ್ಶಿ ವಾರ್ಷಿಕ ವರದಿ ಮಂಡಿಸಿದರು.ಕೋಶಾಧಿಕಾರಿ ಯೋಗೀಶ್ ಕಾರಂತ ಆಯವ್ಯಯ ಮಂಡನೆ ಮಾಡಿದರು.ಡಿ.ವಿ ಸೀತಾರಾಮ ಮಯ್ಯ ಸ್ವಾಗತಿಸಿದರು.ಚೈತ್ರಾ ನಿರೂಪಿಸಿದರು.ಯೋಗೀಶ್ ಕಾರಂತ ವಂದಿಸಿದರು.
































































































































































































































































































































































































































































































































































































































































































































































































































































































































































































































































































































































































































































































































































































































































































