ಶ್ರೀ ಯಕ್ಷೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಬೆಳ್ಳಾಡಿ ಎರಡನೇ ವರ್ಷದ ವರ್ಧಂತ್ಯೋತ್ಸವ, ನೂತನ ಮುಖಮಂಟಪ ಲೋಕಾರ್ಪಣೆ
ಕುಂದಾಪುರ:ತಾಲೂಕಿನ ಸೇನಾಪುರ ಗ್ರಾಮದ ಬೆಳ್ಳಾಡಿ ಶ್ರೀ ಯಕ್ಷೇಶ್ವರಿ ದೇವಸ್ಥಾನದ ಎರಡನೇ ವರ್ಷದ ವರ್ಧಂತ್ಯೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.
ಶ್ರೀಯಕ್ಷೇಶ್ವರಿ ಮತ್ತು ಸಹ ಪರಿವಾರ ದೇವರ ವರ್ಧಂತ್ಯೋತ್ಸವ ಅಂಗವಾಗಿ ಶ್ರೀದೇವಿಗೆ ಹೂವಿನ ಅಲಂಕಾರ ಪೂಜೆ,ಮಂಗಳಾರತಿ ಸೇವೆ, ಅನ್ನದಾನ,ಜೋಡು ಮೇಳದ ಯಕ್ಷಗಾನ ಬಯಲಾಟ ಹಾಗೂ ಚಂಡಿಕಾ ಹೋಮ ಜರುಗಿತು.
ಶ್ಯಾಮಲಾ ಅಶೋಕ್ ಶೆಟ್ಟಿ ಬೆಳ್ಳಾಡಿ ಶ್ರೀಯಕ್ಷೇಶ್ವರಿ ಅಮ್ಮನವರಿಗೆ ನೂತನ ಮುಖಮಂಟಪವನ್ನು ಸಮರ್ಪಿಸಿ ಮಾತನಾಡಿ,ಅಮ್ಮನವರ ಎರಡನೇ ವರ್ಷದ ವರ್ಧಂತ್ಯೋತ್ಸವ ಕಾರ್ಯಕ್ರಮ ಹಾಗೂ ಜೋಡು ಮೇಳದ ಯಕ್ಷಗಾನ ಕಾರ್ಯಕ್ರಮ ಬಹಳಷ್ಟು ವ್ಯವಸ್ಥಿತವಾದ ರೀತಿಯಲ್ಲಿ ಅದ್ದೂರಿಯಾಗಿ ನಡೆದಿದೆ ಎಂದು ಹೇಳಿದರು.ಇವೊಂದು ದೇವತಾ ಕಾರ್ಯದಲ್ಲಿ ಭಾಗಿಯಾದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ದಿನಕರ ಶೆಟ್ಟಿ ಬೆಳ್ಳಾಡಿ ಮಾತನಾಡಿ,ಪೂರ್ವಜರ ಕಾಲದಿಂದಲೂ ಇದ್ದ ದೇವಸ್ಥಾನವನ್ನು ಪ್ರಶ್ನಾ ಚಿಂತನಾ ಕಾರ್ಯದ ಮೂಲಕ ಜೀರ್ಣೋದ್ಧಾರ ಗೊಳಿಸಲಾಗಿದೆ ಎಂದರು.ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವ ಶ್ರೀ ದೇವಿಯ ಶಕ್ತಿ ಅಪಾರವಾದದ್ದು ಎಂದು ಹೇಳಿದರು.
ಶರತ್ ಕುಮಾರ್ ಶೆಟ್ಟಿ ಬೆಳ್ಳಾಡಿ ಮತ್ತು ರಮೇಶ ನಾಯರಿ ಬಾರ್ಕೂರು ಅವರು ನೂತನ ಮುಖಮಂಟಪವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಬೆಳ್ಳಾಡಿ ಮಕ್ಕಿಮನೆ ಕುಟುಂಬಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು.