ಕಾಂಗ್ರೆಸ್ ಪಕ್ಷ ಅಪಪ್ರಚಾರ,ಸುಳ್ಳು ಭರವಸೆಯಿಂದ ಅಧಿಕಾರಕ್ಕೆ ಬಂದಿದೆ-ಸಂಸದ ರಾಘವೇಂದ್ರ
ಕುಂದಾಪುರ:ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರ 9 ವರ್ಷ ಪೂರೈಸಿದೆ.ಪ್ರಧಾನಿ ಹಾಗೂ ಹಿಂದಿನ ನಮ್ಮ ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಾಗಿದೆ.ಕಾಂಗ್ರೆಸ್ಸಿನ ಅಪಪ್ರಚಾರ,ಸುಳ್ಳು ಭರವಸೆಯಿಂದ ಅಧಿಕಾರಕ್ಕೆ ಬಂದಿರಬಹುದು.ಗ್ಯಾರಂಟಿಗಳನ್ನು ಜಾರಿಗೆ ತರಲು ನಾವು ಹಕ್ಕೊತ್ತಾಯ ಮಾಡುತ್ತೇವೆ.ಖಾಸಗಿ ಬಸ್ಗಳಿಗೂ ಸಬ್ಸಿಡಿ ನೀಡುವ ಮೂಲಕ ಅದರಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು.ಇದಕ್ಕಾಗಿ ರಾಜ್ಯವ್ಯಾಪಿ ಬಿಜೆಪಿಯಿಂದ ಜನಾಂದೋಲನ ನಡೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಹೆಮ್ಮಾಡಿಯ ಜಯಶ್ರೀ ಹಾಲ್ನಲ್ಲಿ ಶುಕ್ರವಾರ ನಡೆದ ಬಿಜೆಪಿ ಹಿರಿಯ ಕಾರ್ಯಕರ್ತರ ಹಾಗೂ ವಿವಿಧ ಮೋರ್ಚಾದ ಪದಾಧಿಕಾರಿಗಳ ಸಂಯುಕ್ತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
5 ಕೆ.ಜಿ. ಅಕ್ಕಿ ಕೇಂದ್ರ ಕೊಡುತ್ತಿದ್ದು,ಕಾಂಗ್ರೆಸ್ ಭರವಸೆ ಕೊಟ್ಟಂತೆ ಮೋದಿಯವರು ಕೊಡುತ್ತಿರುವ 5 ಕೆ.ಜಿ. ಬಿಟ್ಟು ಹೆಚ್ಚುವರಿ ಆಗಿ 10 ಕೆ.ಜಿ. ಕೊಡಬೇಕಾಗುತ್ತದೆ.ಇದು ಜಾರಿಗೆ ಬರುವವರೆಗೂ ಹೋರಾಟಕ್ಕೆ ಇಳಿಯಬೇಕು.ಪದವಿ,ಡಿಪ್ಲೊಮಾ ಮುಗಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಹಣ ಕೊಡುತ್ತೇವೆ ಎಂದವರು ಈಗ 2022-23ರಲ್ಲಿ ಪಾಸ್ ಆದವರು ಎನ್ನುತ್ತಿದ್ದಾರೆ.ಮಹಿಳೆಯರಿಗೆ 2 ಸಾವಿರ ಹಣ ಕೊಡುವ ಯೋಜನೆ ಇನ್ನೂ ಶುರುವಾಗಿಲ್ಲ.ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಷರತ್ತುಗಳನ್ನು ವಿಧಿಸುವ ಮೂಲಕ ಪಲಾಯನ ಮಾಡುತ್ತಿದೆ ಎಂದು ಆರೋಪಿಸಿದರು.ಮುಂಬರುವ ಜಿ.ಪಂ., ತಾ.ಪಂ. ಹಾಗೂ ಲೋಕಸಭೆ ಚುನಾವಣೆಗೆ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಕಾರ್ಯ ಆಗಬೇಕಿದೆ ಎಂದು ಸಂಸದರು ಹೇಳಿದರು.
ಅನೇಕ ಮಂದಿ ಹಿರಿಯ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿನ ಲೋಪಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ,ಮಂಡಲದ ಅಧ್ಯಕ್ಷ ದೀಪಕ್ ಶೆಟ್ಟಿ,ಪ್ರಮುಖರಾದ ಪ್ರಿಯದರ್ಶಿನಿ ದೇವಾಡಿಗ,ಮಾಲತಿ ನಾಯ್ಕ್,ಆನಂದ ಖಾರ್ವಿ,ಸಂತೋಷ್ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.
