ಕುಲಕಸುಬನ್ನು ವೃತ್ತಿಯನ್ನಾಗಿ ಪರಿಗಣಿಸಬೇಕು
![](https://kundapurtimes.com/wp-content/uploads/2024/02/WhatsApp-Image-2024-02-03-at-8.40.37-PM-1.jpeg)
ಕುಂದಾಪುರ:ಕುಲಕಸುಬನ್ನು ವೃತ್ತಿಯನ್ನಾಗಿ ಪರಿಗಣಿಸಿ ಕೌಶಲ್ಯವೃದ್ಧಿಯಿಂದ ಇನ್ನಷ್ಟು ಚೆಂದವಾಗಿಸುವ ಕೆಲಸ ಮಾಡಬೇಕಾಗಿದೆ ಆ ನಿಟ್ಟಿನಲ್ಲಿ ಅಗತ್ಯವಿದ್ದವರಿಗೆ ಇನ್ನಷ್ಟು ತರಬೇತಿಯನ್ನು ಇಲಾಖೆಯಿಂದ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಹೇಳಿದರು.
ಕರ್ನಾಟಕ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಉಡುಪಿ ಜಿಲ್ಲಾಡಳಿತ,ಐ.ಟಿ.ಡಿ.ಪಿ. ಉಡುಪಿ ಮತ್ತು ಉಡುಪಿ ಜಿಲ್ಲಾ ಕೊರಗ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಪಡುಕೋಣೆ ಸುನೀತಾ ಅವರ ಮನೆ ವಠಾರದಲ್ಲಿ ಕಳೆದ 30 ದಿನಗಳಿಂದ ನಡೆಯುತ್ತಿರುವ ಬಿದಿರಿನ ಬುಟ್ಟಿ ತಯಾರಿಕಾ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ,ಮಾತನಾಡಿದರು.
ಆಧುನಿಕ ಕಾಲಘಟ್ಟದಲ್ಲಿ ಸಮುದಾಯದ ಬೆಳವಣಿಗೆಗೆ ಶಿಕ್ಷಣವಂತರಾಗುವುದು ಅತ್ಯಗತ್ಯವಾಗಿದೆ ಅದರ ಜತೆಗೆ ರಕ್ತಗತವಾಗಿ ಬಂದಿರುವ ನಮ್ಮ ಕುಲ ಕಸುಬನ್ನು ನಶಿಸಿ ಹೋಗದಂತೆ ಕಾಪಾಡುವ ಹೊಣೆಗಾರಿಕೆ ಕೂಡ ನಮ್ಮೆಲ್ಲರದಾಗಿದೆ ಎಂದರು.
ಬÉೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ,ಪರಂಪರೆಯ ಕುಲ ಕಸುಬುಗಳನ್ನು ಇನ್ನಷ್ಟು ಉತ್ತೇಜಿಸುವ ಸಲುವಾಗಿ ಕಚ್ಚಾವಸ್ತುಗಳ ಪೂರೈಕೆ ಸಹಿತ ಉತ್ತಮ ಮಾರುಕಟ್ಟೆ ಒದಗಿಸುವ ಕಾರ್ಯ ಆಗಬೇಕಾಗಿದೆ ಎಂದು ಹೇಳಿದರು.
ನಾಡ ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ಅಧ್ಯಕ್ಷತೆ ವಹಿಸಿದ್ದರು.ಗ್ರಾ.ಪಂ ಸದಸ್ಯರಾದ ಅರವಿಂದ ಪೂಜಾರಿ,ಶೋಭಾ,ಮಮತಾ ರಾಜು ಪಡುಕೋಣೆ ಮಾಜಿ ಸದಸ್ಯ ರಾಮ ಪೂಜಾರಿ,ತರಬೇತುದಾರರಾದ ಬಾಬು ಹಾಗೂ ದೀಪಾ,ಐ.ಟಿ.ಡಿ.ಪಿ. ಯೋಜನಾ ಸಮನ್ವಯಾಧಿಕಾರಿ ಉಡುಪಿ ದೂದ್ಪೀರ್,ಕೊರಗ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅರುಣ್ ಬಿ. ಪ್ರಸ್ತಾವಿಕವಾಗಿ ಮಾತನಾಡಿದರು. ಇಲಾಖೆಯ ಸಿಬಂದ್ದಿ ನಾಗರಾಜ ಖಾರ್ವಿ ಸ್ವಾಗತಿಸಿದರು.ವ್ಯವಸ್ಥಾಪಕ ರಾಮಕೃಷ್ಣ ನಿರೂಪಿಸಿದರು.ಕೌನ್ಸಿಲರ್ ಸಂಧ್ಯಾರಾಣಿ ವಂದಿಸಿದರು.