ಶ್ರೀರಾಮ ಭಜನಾ ಮಂಡಳಿ ಬಡಾಕೆರೆ 32ನೇ ವಾರ್ಷಿಕೋತ್ಸವ

ಕುಂದಾಪುರ:ಹಿರಿಯರು ಮತ್ತು ಕಿರಿಯರ ಒಗ್ಗೂಡುವಿಕೆಯಿಂದ ಭಜನಾ ಮಂಡಳಿಯನ್ನು ಸ್ಥಾಪನೆಮಾಡಿಕೊಂಡು ನಿರಂತರವಾಗಿ ಭಜನಾ ಕೈಂಕರ್ಯದಲ್ಲಿ ತೊಡಗಿಕೊಳ್ಳುವುದರ ಜತೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಮಾಡುವುದರ ಮೂಲಕ ಶ್ರೀರಾಮ ಭಜನಾ ಮಂಡಳಿ ಊರಿನ ಪ್ರಮುಖ ಶಕ್ತಿ ಕೇಂದ್ರವಾಗಿ ಕೆಲಸ ಮಾಡುತ್ತಿರುವುದು ಎಲ್ಲರಿಗೂ ಮಾದರಿ ಆಗಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಬೈಂದೂರು ತಾಲೂಕಿನ ಬಡಾಕೆರೆ ಶ್ರೀಲಕ್ಷ್ಮೀ ಜನಾರ್ಧನ ದೇವಸ್ಥಾನದ ವಠಾರದಲ್ಲಿ ಶುಕ್ರವಾರ ನಡೆದ ಶ್ರೀರಾಮ ಭಜನಾ ಮಂಡಳಿ ಬಡಾಕೆರೆ ಅದರ 32ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿತ್ಯವೂ ಮನೆಗಳಲ್ಲಿ ಭಜನೆ ಮಾಡುವುದರಿಂದ ಮನಸುಗಳು ಜೋಡಣೆಯಾಗಿ ಕುಟುಂಬದಲ್ಲಿ ಒಳ್ಳೆ ರೀತಿಯ ವಾತಾವರಣ ನಿರ್ಮಾಣವಾಗುವಂತೆ ಮಾಡಲು ಸಹಕಾರಿಯಾಗುತ್ತದೆ ಎಂದರು.
ವೇ.ಮೂ ಲಕ್ಷ್ಮೀಶ ಅಡಿಗ ಬಡಾಕೆರೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ದೇವರನ್ನು ಭಜಿಸಲು ಭಜನೆ ಪ್ರಮುಖವಾದ ಮಾರ್ಗವಾಗಿದೆ ಭಜನೆ ಮಾಡುವುದರಿಂದ ಮನಸ್ಸಿನ ಭಾವನೆಗಳನ್ನು ಸುಲಭದಲ್ಲಿ ಹಿಡಿದಿಟ್ಟುಕೊಳ್ಳಬಹುದು ಧಾರ್ಮಿಕ ಪ್ರಜ್ಞೆಯಿಂದ ಬಾಳುದರಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯವಿದೆ ಎಂದು ಹೇಳಿದರು.
ಗ್ರಾಮದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬೇಕು ಎನ್ನುವ ಉದ್ದೇಶದೊಂದಿಗೆ ಆರಂಭಗೊಂಡ ಭಜನಾ ಮಂಡಳಿ ಇಂದು ಊರಿನ ಅಂಗವಾಗಿ ಬೆಳೆದು ಬಂದಿದೆ.ತ್ಯಾಗದ ಮನೋಭಾವ ಇದ್ದಾಗ ಮಾತ್ರ ಸಂಘಟನೆಗಳು ಬೆಳೆಯಲು ಸಾಧ್ಯವಿದೆ ಎಂದರು.
ನಾಡ ಗ್ರಾ.ಪಂ ಅಧ್ಯಕ್ಷೆ ಪಾರ್ವತಿ ಮೊಗವೀರ ಅಧ್ಯಕ್ಷತೆ ವಹಿಸಿದ್ದರು,ಶ್ರೀರಾಮ ಭಜನಾ ಮಂಡಳಿ ಬಡಾಕೆರೆ ಅಧ್ಯಕ್ಷ ಮಹೇಶ ಆಚಾರ್ಯ,ಸಾಹಿತಿ ಶ್ರೀನಿವಾಸ ಶೆಟ್ಟಿ,ಕಿರಿಮಂಜೇಶ್ವರ ಅಗಸ್ತ್ಯೇಶ್ವರ ದೇವಸ್ಥಾನದ ಮೊಕ್ತೇಸರರಾದ ಪ್ರಕಾಶ ಐತಾಳ,ಅಮರ ದೀಪ್,ಶ್ರೀಲಕ್ಷ್ಮೀ ಜನಾರ್ದನ ದೇವಸ್ಥಾನ ಬಡಾಕೆರೆ ಮೊಕ್ತೇಸರರಾದ ನರಸಿಂಹ ಅಡಿಗ,ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಣೇಶ್ ನಾಯ್ಕ್ ಉಪಸ್ಥಿತರಿದ್ದರು.

ಸಮಾಜ ಸೇವಕರಾದ ಕೃಷ್ಣ ನಾಯ್ಕ್ ಮತ್ತು ರಮೇಶ್ ದೇವಾಡಿಗ ವಂಡ್ಸೆ ಅವರನ್ನು ಸನ್ಮಾನಿಸಲಾಯಿತು.


ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಿಸಲಾಯಿತು.ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ನಾಗೇಶ್ ಶೇಟ್ ಸ್ವಾಗತಿಸಿದರು.ವಿಕ್ರಮ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಹೇಶ್ ಶೇಟ್ ನಿರೂಪಿಸಿ,ವಂದಿಸಿದರು.ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನ ಜರುಗಿತು.