ಕಂಪ್ಯೂಟರ್ ತರಬೇತಿ ಕೇಂದ್ರ:ಲೈಬ್ರರಿ,ಪೀಠೋಪಕರಣ ಹಸ್ತಾಂತರ


ಬೈಂದೂರು:ಸಮೃದ್ಧ ಬೈಂದೂರು ಯೋಜನೆಯ ಭಾಗವಾಗಿ ಸ್ವಯಂ ಸ್ಪೂರ್ತಿ ಫೌಂಡೇಶನ್ ಬೆಂಗಳೂರು ವತಿಯಿಂದ ಸ.ಹಿ.ಪ್ರಾ ಶಾಲೆ ಬಿಜೂರು,ಸ.ಹಿ.ಪ್ರಾ ಶಾಲೆ ಕಾಲ್ತೋಡು ಹಾಗೂ ಸ.ಹಿ.ಪ್ರಾ ಶಾಲೆ ಜಡ್ಕಲ್ ನಲ್ಲಿ ನಿರ್ಮಿಸಿದ
ಕಂಪ್ಯೂಟರ್ ಲ್ಯಾಬ್ ಮತ್ತು ಗ್ರಂಥಾಲಯಗಳನ್ನು ಒಳಗೊಂಡ ಸ್ವಯಂ ಸ್ಪೂರ್ತಿ ಕೌಶಲ್ಯ ಕೇಂದ್ರವನ್ನು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಉದ್ಘಾಟಿಸಿ,ಪುಸ್ತಕ ಕ್ರೀಡಾ ಸಾಮಾಗ್ರಿಗಳನ್ನು ಹಸ್ತಾಂತರ ಮಾಡಿದರು.ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು ಸಮೃದ್ಧ ಬೈಂದೂರು ಪರಿಕಲ್ಪನೆ ಯೋಜನೆಯ ಬಗ್ಗೆ ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 300 ಟ್ರೀಸ್ ಕಾರ್ಯಕ್ರಮದ ಕುರಿತು ವಿವರಿಸಿದರು.ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳು,ಊರವರು ಎಸ್.ಡಿ.ಎಂ.ಸಿ ಮತ್ತು ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು ಎಂದರು.
ಸ್ವಯಂಸ್ಪೂರ್ತಿ ಫೌಂಡೇಶನ್ ಅಧ್ಯಕ್ಷ ನಾಗರಾಜ ಶೆಟ್ಟಿ ಜಡ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಕಲಿಕಾ ಸ್ನೇಹಿ ವಾತಾವರಣ ನಿರ್ಮಿಸುವ ಉದ್ದೇಶದಿಂದ,ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುವ ಮಹತ್ವಾಕಾಂಕ್ಷೆಯಿಂದ ಸ್ವಯಂಸ್ಪೂರ್ತಿ ಕೌಶಲ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ ಹಾಗೂ ಇದರ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಶಿಕ್ಷಕರ ಸಹಾಯದಿಂದ ಪಡೆಯ ಬೇಕು ಎಂದರು.ನಮ್ಮ ಸಂಸ್ಥೆಯು ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸರ್ವ ಸದಸ್ಯರು,ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು, ಸ್ವಯಂಸ್ಪೂರ್ತಿ ಫೌಂಡೇಶನ್ ಪದಾಧಿಕಾರಿಗಳು ಹಾಗೂ ಊರವರು ಉಪಸ್ಥಿತರಿದ್ದರು.