ಮರದ ಕಾಲು ಸಂಕಕ್ಕೆ ಮುಕ್ತಿ,ಸರಾಗ ಸಂಚಾರಕ್ಕೆ ಅನುಕೂಲ
ಕುಂದಾಪುರ:ಜಡ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡೆಪಾಲು –ಮುದ್ಗಮ್ಮಿ ಎಂಬಲ್ಲಿ ಇದ್ದ ಅಪಾಯಕಾರಿ ಮರದ ಕಾಲು ಸಂಕಕ್ಕೆ ಮುಕ್ತಿ ನೀಡಿ ನರೇಗಾ ಯೋಜನೆಯಡಿ ಹೊಸ ಕಾಲುಸಂಕವನ್ನು ನಿರ್ಮಾಣ ಮಾಡಲಾಗಿದೆ.ಸುಸಜ್ಜಿತವಾದ ಕಾಂಕ್ರಿಟ್ ಕಾಲು ಸಂಕ ನಿರ್ಮಾಣವಾಗಿರುವುದರಿಂದ ಅಲ್ಲಿನ ನಿವಾಸಿಗಳಿಗೆ ಸರಾಗವಾಗಿ ಸಂಚಾರ ಮಾಡಬಹುದಾಗಿದೆ.
ಜಡ್ಕಲ್ ಕೊಡೆಪಾಲು –ಮುದ್ಗಮ್ಮಿ ಪರಿಸರದಲ್ಲಿ ಕಾಲು ಸಂಕ ನಿರ್ಮಾಣದಿಂದ ಶಾಲಾ ಮಕ್ಕಳಿಗೆ ಹಾಗೂ ಪರಿಸರದ ಸುಮಾರು 25 ಮನೆಗಳಿಗೆ ಅನುಕೂಲವಾಗಲಿದ್ದು ನಿವಾಸಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.ಬೈಂದೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಅವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರು,ಬೈಂದೂರು ತಾ.ಪಂ ಸಹಾಯಕ ನಿರ್ದೇಶಕರು,ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಲು ಸಂಕ ನಿರ್ಮಾಣಕ್ಕೆ ಕಾಳಜಿ:ಗ್ರಾಮೀಣ ಭಾಗದ ಪರಿಸರದಲ್ಲಿ ಕಾಲು ಸಂಕಗಳನ್ನು ನಿರ್ಮಿಸುವಲ್ಲಿ ಬೈಂದೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಅವರು ವಿಶೇಷವಾದ ಮುತುವರ್ಜಿಯನ್ನು ವಹಿಸಿದ್ದಾರೆ.ಜಡ್ಕಲ್ ಗ್ರಾಮವೊಂದರಲ್ಲೆ ನರೇಗಾ ಯೋಜನೆಯಡಿ 5 ಕಾಲು ಸಂಕಗಳು ನಿರ್ಮಾಣಗೊಂಡಿವೆ.
(ಜಡ್ಕಲ್ ಕೊಡೆಪಾಲು-ಮುದ್ಗಮ್ಮಿ ಪರಿಸರದಲ್ಲಿದ್ದ ಮರದ ಹಳೆ ಕಾಲು ಸಂಕ)
![](https://kundapurtimes.com/wp-content/uploads/2023/07/WhatsApp-Image-2023-07-12-at-8.44.48-PM-1024x499.jpeg)