ಭಾರಿ ಮಳೆ ಗಾಳಿಗೆ ಕುಂದಾಪುರ,ಬೈಂದೂರುನಲ್ಲಿ ವ್ಯಾಪಕ ನಷ್ಟ
ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಕಂಚಗೋಡು ಟರ್ಟಲ್ ಬೀಚ್ ರೆಸಾರ್ಟ್ ಹತ್ತಿರ ನಾಗರಾಜ ಮತ್ತು ಸುಭಾಷ್ ಖಾರ್ವಿ ಮನೆ ಹಾಗೂ ಕಂಚಗೋಡು ಕೃಷ್ಣ ಖಾರ್ವಿ ಮನೆ ಬಳಿ ಚರಂಡಿ ಅವ್ಯವಸ್ಥೆಯಿಂದ ಮಳೆ ನೀರು ಮನೆ ಎದುರು ತುಂಬಿಕೊಂಡಿದೆ.ಚರಂಡಿ ದುರಸ್ಥಿ ಮಾಡಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಳೆಯಿಂದ ಮನೆಗೆ ಹಾನಿ:
ಬಾರಿ ಗಾಳಿ ಮಳೆಗೆ ಕುಂದಾಪುರ ತಾಲೂಕಿನ ಆಲೂರು ಗ್ರಾಮದ ನವಗ್ರಾಮ ಕಾಲೋನಿ ಶೇಷು ಪೂಜಾರಿ ಅವರ ಮನೆ ಹೆಂಚು ಹಾರಿ ಹೋಗಿದ್ದು ನಷ್ಟ ಸಂಭವಿಸಿದ ಘಟನೆ ಬುಧವಾರ ನಡೆದಿದೆ.ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಧಾರಕಾರ ಮಳೆ ಮನೆ ಗೋಡೆ ಕುಸಿತ:
ಬುಧವಾರ ಸುರಿದ ಬಾರಿ ಮಳೆಗೆ ಗಂಗೊಳ್ಳಿ ಗ್ರಾಮದ ಬಾವಿಕಟ್ಟೆ ನಿವಾಸಿ ಶಕುಂತಲಾ ಎನ್ನುವವರ ಮನೆ ಗೋಡೆ ಕುಸಿತಗೊಂಡಿದ್ದು ಆರ್ಥಿಕ ನಷ್ಟ ಉಂಟಾಗಿದೆ.ಗಂಗೊಳ್ಳಿ ಠಾಣೆಯ ಪಿಎಸ್ಐ ಹರೀಶ್ ನಾಯ್ಕ್ ಮತ್ತು ಸಿಬ್ಬಂದಿಗಳು ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಸ್ತೆಗೆ ಅಡ್ಡಲಾಗಿ ಬಿದ್ದ ಮರ ತೆರವು:
ತ್ರಾಸಿ-ಗಂಗೊಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಮೇಲೆ ಧರೆಗುರುಳಿದ ಮರವನ್ನು ಸ್ಥಳೀಯರು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಗಾಳಿ ಮಳೆಗೆ ನೆಲಕ್ಕೆ ಉರುಳಿದ ವಿದ್ಯುತ್ ಕಂಬ:
ಧಾರಕರವಾಗಿ ಸುರಿದ ಭಾರಿ ಮಳೆ ಗಾಳಿಗೆ ವಿದ್ಯುತ್ ಕಂಬ ನೆಲಕ್ಕೆ ಉರುಳಿದ ಘಟನೆ ಬೈಂದೂರು ತಾಲೂಕಿನ ನಾಡ ಗುಡ್ಡೆಅಂಗಡಿಯಲ್ಲಿ ಬುಧವಾರ ನಡೆದಿದೆ.ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಕಂಬವನ್ನು ದುರಸ್ತಿಗೊಳಿಸಿ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಸರಿಪಡಿಸಿದರು.
ಹೊಸಾಡು ಬೈಲು ಜಲಾವೃತ:ಸಮಸ್ಯೆ ಬಗೆಹರಿಸುವಂತೆ ಆಗ್ರಹ:
ಎಡಬಿಡದೆ ಸುರಿದ ಬಾರಿ ಮಳೆಗೆ ಹೊಸಾಡು ಬೈಲು ಜಲಾವೃತವಾಗಿದ್ದು ಗದ್ದೆಯಲ್ಲಿ ನಾಟಿ ಮಾಡಿದ ಸಸಿಗಳು ನೀರಿನಲ್ಲಿ ಮುಳುಗಿದೆ.ರಾಷ್ಟ್ರೀಯ ಹೆದ್ದಾರಿ ಚರಂಡಿ ನೀರು ತೋಡಿನ ಮೂಲಕ ಬೈಲಿಗೆ ನುಗ್ಗುತ್ತಿರುವುದರಿಂದ ಸಮಸ್ಯೆ ಸೃಷ್ಟಿಯಾಗುತ್ತಿದೆ ಎಂದು ರೈತರು ದೂರಿದ್ದಾರೆ.ಚರಂಡಿ ನೀರಿನ ಸಮಸ್ಯೆಯನ್ನು ಬಗೆ ಹರಿಸುವಂತೆ ಆಗ್ರಹಿಸಿದ್ದಾರೆ.
ಬುಧವಾರ ಸುರಿದ ಧಾರಕಾರ ಮಳೆಗೆ ಕುಂದಾಪುರ ಮತ್ತು ಬೈಂದೂರು ತಾಲೂಕಿನಾದ್ಯಂತ ವ್ಯಾಪಕ ನಷ್ಟ ಉಂಟಾಗಿದ್ದು ಜೀವ ಹಾನಿ ಕೂಡ ಸಂಭವಿಸಿದೆ.
(ರಸ್ತೆಗೆ ಅಡ್ಡಲಾಗಿ ಬಿದ್ದ ಮರ ತೆರವು)
![](https://kundapurtimes.com/wp-content/uploads/2023/07/5MR-5-Road-1-1024x443.jpg)
![](https://kundapurtimes.com/wp-content/uploads/2023/07/5MR-1-Home-1-1-1024x410.jpg)
(ಧಾರಕಾರ ಮಳೆ ಮನೆ ಗೋಡೆ ಕುಸಿತ)