ಸರಕಾರಿ ಕಿರಿಯ ಪ್ರಾಥಮಿಕ ಹೊಸಬಾಳು ಶಾಲೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮ ಸಂಭ್ರಮಾಚರಣೆ

ಕುಂದಾಪುರ:ಬೈಂದೂರು ತಾಲೂಕಿನ ಹಳ್ಳಿಹೊಳೆ ಗ್ರಾಮದ ಹೊಸಬಾಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಬೆಳ್ಳಿ ಬೆಳಕು, ಸಾಂಸ್ಕøತಿಕ ಸೌರಭ ಕಾರ್ಯಕ್ರಮ ಅದ್ಧೂರಿಯಾಗಿ ಬುಧವಾರ ನಡೆಯಿತು.

ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆ ಅನುವಂಶಿಕ ಮೊಕ್ತೇಸರರಾದ ಎಸ್.ಸಚ್ಚಿದಾನಂದ ಚಾತ್ರ ಅವರು ಬೆಳ್ಳಿ ಬೆಳಕು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ದಾನ,ಧರ್ಮ ಮಾಡಿಕೊಂಡು ಉಪಕಾರ ಮನೋಭಾವದಿಂದ ಬಾಳ್ವೆ ಮಾಡಿದಾಗ ಮಾತ್ರ ನಮ್ಮ ಹೆಸರು ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು.ಶಾಲೆಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಕೈಲಾದಷ್ಟು ಸಹಾಯ ಮಾಡಲಾಗುವುದು ಎಂದರು.


ಹೊಸಬಾಳು ಶಾಲೆಯ ಮುಖ್ಯೋಪಾಧ್ಯಾಯರಾದ ರಾಘವೇಂದ್ರ.ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ತೆಂಗಿನ ಗರಿ ಮಾಡಿನೊಂದಿಗೆ ಆರಂಭಗೊಂಡ ನಮ್ಮ ಈ ಶಾಲೆ ಇಂದು ರಜತ ಮಹೋತ್ಸವ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ.ಈ ಭಾಗದ ಪುಟ್ಟ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಅಂಗನವಾಡಿ ಕೇಂದ್ರವನ್ನು ತೆರೆಯಲಾಗಿದ್ದು, ಶಾಲೆಗೆ ಕೊಠಡಿಗಳ ಕೊರತೆ ಸಹಿತ ಶಾಲಾ ಆವರಣ ಗೋಡೆ, ಬಾಲಭವನ ನಿರ್ಮಾಣ ಹಾಗೂ ಶಾಲೆಗೊಂದು ಪ್ರಾಜೆಕ್ಟರ್ ಅವಶ್ಯಕತೆ ಇದೆ ಎಂದು ಹೇಳಿದರು.ಶಾಲಾಭಿವೃದ್ದಿಗೆ ದಾನಿಗಳು ಗ್ರಾಮಸ್ಥರು ಸಹಕರಿಸಬೇಕೆಂದರು.

ಹಳ್ಳಿಹೊಳೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರದೀಪ್ ಕೊಠಾರಿ ಮಾತನಾಡಿ, ಸರಕಾರಿ ಜಾಗ ಆಗಿದ್ದರು ಕೂಡ ಅರಣ್ಯ ಇಲಾಖೆ ತಕರಾರಿ ನಿಂದ ಇನ್ನೂ ಕೂಡ ಶಾಲೆ ಹೆಸರಿಗೆ ಜಾಗ ರೆಕಾರ್ಡ್ ಆಗಿಲ್ಲ,ಎಲ್ಲಾ ರೀತಿಯ ಸಮಸ್ಯೆಗಳನ್ನು ಬಗೆಹರಿಸಿ ಶಾಲೆಯ ಹೆಸರಿಗೆ ಜಾಗ ರೆಕಾರ್ಡ್ ಆಗುವಂತೆ ಶಾಸಕರು ಗಮನ ಹರಿಸಬೇಕು ಎಂದರು.

ಹೊಸಬಾಳು ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಳ್ಳಿಹೊಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಶೆಟ್ಟಿ ಮಾತನಾಡಿ, ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಚಟುವಟಿಕೆ ಹೆಚ್ಚಿಸಲು ಆಟೋಟ ಮತ್ತು ಮನೋರಂಜನಾ ಕಾರ್ಯಕ್ರಮಗಳು ಬಹಳಷ್ಟು ಸಹಕಾರಿ ಆಗುತ್ತದೆ.ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ನಿಂದ ಸುಮಾರು 12 ಲಕ್ಷ.ರೂ ವೆಚ್ಚದಲ್ಲಿ ಶಾಲೆಯ ಅಭಿವೃದ್ಧಿಯನ್ನು ಮಾಡಲಾಗಿದೆ.ಬಾಕಿ ಉಳಿದ ಅಭಿವೃದ್ಧಿ ಕಾರ್ಯಗಳಿಗೆ ದಾನಿಗಳು ಗ್ರಾಮಸ್ಥರು ಸಹಕರಿಸಬೇಕೆಂದರು.



ಹೊಸಬಾಳು ಶಾಲೆಯ ಎಸ್.ಡಿ ಎಂ.ಸಿ ಅಧ್ಯಕ್ಷ ಶೇಖರ ಕಟ್ಟಿನಾಡಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಮಂಡಳಿ ಸದಸ್ಯ ಜಯಾನಂದ ಹೋಬಳಿದಾರ್,ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಬಾಲಚಂದ್ರ ಭಟ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ವಲಯ ಅಧ್ಯಕ್ಷ ಶೇಖರ ಪೂಜಾರಿ, ನಿವೃತ್ತ ಶಿಕ್ಷಕ ಹಳ್ಳಿಹೊಳೆ ಚಕ್ರೇಶ್ ಯಡಿಯಾಳ,ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಂಕರನಾರಾಯಣ ಯಡಿಯಾಳ,ಉಪ ವಲಯ ಅರಣ್ಯಾಧಿಕಾರಿ ಸಿದ್ಧಾಪುರ ವನ್ಯಜೀವಿ ವಿಭಾಗ ನಿಂಗಪ್ಪ ವಾಲಿ, ನಾರಾಯಣ ಪೂಜಾರಿ ಹಳ್ಳಿಬೈಲು,ಶಂಕರ ಕುಲಾಲ ಹಳ್ಳಿಬೈಲು, ನಾರಾಯಣ ಚಾತ್ರ ಹಳ್ಳಿಬೈಲು,ಸೋಮ ಪೂಜಾರಿ,ತಿಮ್ಮ ಕಟ್ಟಿನಾಡಿ, ರಂಗ ಕಬ್ಬಿನಾಲೆ,ಶಿವರಾಮ ಪೂಜಾರಿ ಹಳ್ಳಿಬೈಲು, ಕ್ಷೇತ್ರ ಸಮನ್ವಯಾಧಿಕಾರಿ ಬೈಂದೂರು ಮಂಜುನಾಥ್ ನಾಯ್ಕ್, ಶಿಕ್ಷಣ ಸಂಯೋಜಕ ಸತ್ಯನಾರಾಯಣ ಕೊಡೇರಿ,ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷ ಶಿವರಾಮ ಕುಲಾಲ್, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು ಉಪಸ್ಥಿತರಿದ್ದರು.

ಎಸ್ಡಿಎಂಸಿ ಅಧ್ಯಕ್ಷ ಶೇಖರ ಕಟ್ಟಿನಾಡಿ ವಂದಿಸಿದರು.ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು, ಬಿಸಿಯೂಟ ಸಹಾಯಕರನ್ನು ಗೌರವಿಸಲಾಯಿತು.ನಾನಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಹಳ್ಳಿಹೊಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಶೆಟ್ಟಿ ಧ್ವಜಾರೋಹಣ ನೆರವೇರಿಸಿದ್ದರು.
