ಕಂಬದಕೋಣೆ:ಆರ್.ಕೆ ಸಂಜೀವ ರಾವ್ ಮೆಮೋರಿಯಲ್ ಟ್ರೋಫಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಉದ್ಘಾಟನೆ

ಕುಂದಾಪುರ:ಆರ್.ಕೆ ಸಂಜೀವ ರಾವ್ ಮೆಮೋರಿಯಲ್ ಟ್ರೋಫಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಬೈಂದೂರು ತಾಲೂಕಿನ ಕಂಬದಕೋಣೆಯಲ್ಲಿ ಅದ್ದೂರಿಯಾಗಿ ಶನಿವಾರ ನಡೆಯಿತು.

ರಾಷ್ಟ್ರ ಪ್ರಶಸ್ತಿ ವಿಜೇತರಾದ ನಿವೃತ್ತ ಶಿಕ್ಷಕ ಕರುಣಾಕರ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ,ಊರಿನ ಒಳಿತಿನ ಬಗ್ಗೆ ಶ್ರಮಿಸಿದ ಆರ್.ಕೆ ಸಂಜೀವ ರಾವ್ ಅವರು ವ್ಯಕ್ತಿ ಅಲ್ಲಾ ಒಂದು ಶಕ್ತಿ ಕುಂದಾಪುರ ತಾಲೂಕಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಾಮಾಜಿಕ,ಧಾರ್ಮಿಕ,ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸಿ ಎಲ್ಲರಿಂದಲೂ ಗೌರವಿಸಲ್ಪಡುವ ಆರ್.ಕೆ ಸಂಜೀವ ರಾವ್ ಅವರ ಜೀವನದ ಶೈಲಿ ಎಲ್ಲರಿಗೂ ಪ್ರೇರಣದಾಯಕ ವಾದುದು.ಆರ್.ಕೆ ಸಂಜೀವ ರಾವ್ ಅವರ ಸುಪುತ್ರರಾದ ಕೆ.ಎಸ್ ಪ್ರಮೋದ್ ರಾವ್ ಕೂಡ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸ್ಪಂದಿಸುವ ವ್ಯಕ್ತಿಯಾಗಿದ್ದಾರೆ ಇಂತಹ ಮಹಾನ್ ವ್ಯಕ್ತಿಗಳನ್ನು ಪಡೆದ ಕಂಬದಕೋಣೆ ಗ್ರಾಮ ಅದೃಷ್ಟವಂತವಾಗಿದೆ ಎಂದು ಹೇಳಿದರು.ಆರ್.ಕೆ ಸಂಜೀವ ರಾವ್ ಅವರ ಸವಿನೆನಪಿನಲ್ಲಿ ಇವೊಂದು ವಾಲಿಬಾಲ್ ಪಂದ್ಯಾಟವನ್ನು ಆಯೋಜನೆ ಮಾಡಿರುವುದು ಬಹಳಷ್ಟು ಸಂತೋಷದ ವಿಷಯವಾಗಿದೆ ಎಂದರು.

ನಂಚಾರು ಕಾಮಧೇನು ಗೋಶಾಲೆ ಮಹಾ ಪೋಷಕರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಂಬದಕೋಣೆ ಧರ್ಮದರ್ಶಿಗಳಾದ ಕೆ.ಎಸ್ ಪ್ರಮೋದ್ ರಾವ್ ಮಾತನಾಡಿ,ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಯುವ ಜನತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇವೊಂದು ವಾಲಿಬಾಲ್ ಪಂದ್ಯಾಟಕ್ಕೆ ಸಂಪೂರ್ಣವಾದ ಸಹಕಾರವನ್ನು ನೀಡಲಾಗಿದೆ.ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾ ಚಟುವಟಿಕೆಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಯುವಕರನ್ನು ಸಂಘಟಿತರನ್ನಾಗಿ ಬಾಳುವಂತೆ ಮಾಡಲು ಸಹಕಾರಿ ಆಗುತ್ತದೆ.ಯುವ ಶಕ್ತಿಯಿಂದ ದೇಶ ಸುಭೀಕ್ಷೆಗೊಳ್ಳಲಿ ಎಂದು ಶುಭಹಾರೈಸಿದರು.

ಶ್ರೀಬೊಬ್ಬರ್ಯ ಫ್ರೆಂಡ್ಸ್ ಅಧ್ಯಕ್ಷ ಸುರೇಂದ್ರ ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,ಕೆ.ಎಸ್ ಪ್ರಮೋದ್ ಅಣ್ಣನವರ ಸಹಕಾರದಿಂದ ಇವೊಂದು ವಾಲಿಬಾಲ್ ಪಂದ್ಯಾಟವನ್ನು ಅವರ ತಂದೆಯವರಾದ ಆರ್.ಕೆ ಸಂಜೀವ ರಾವ್ ಅವರ ಸ್ಮರಣಾರ್ಥವಾಗಿ ಆಯೋಜನೆ ಮಾಡಲಾಗಿದೆ.ಯುವಕರಿಗೆ ಉತ್ಸಾಹದ ಚಿಲುಮೆಯಾಗಿರುವ ಪ್ರಮೋದ ಅಣ್ಣನವರಿಗೆ ದೇವರು ಸದಾ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿದರು.

ಕಂಬದಕೋಣೆ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ದೇವಾಡಿಗ ಮಾತನಾಡಿ,ಆರ್.ಕೆ ಸಂಜೀವ ರಾವ್ ಮೆಮೋರಿಯಲ್ ಟ್ರೋಫಿ ಅದ್ದೂರಿಯಾಗಿ ನಡೆದಿದೆ.ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಕ್ರಮಗಳು ನಮ್ಮ ಗ್ರಾಮದಲ್ಲಿ ನಡೆಯುವಂತೆ ಆಗಲಿ ಎಂದು ಹೇಳಿದರು.

ಉದ್ಯಮಿ ಜಯಶೀಲ ಶೆಟ್ಟಿ ಮಾತನಾಡಿ,ಗ್ರಾಮೀಣ ಪ್ರದೇಶದಲ್ಲಿ ಇವೊಂದು ಪಂದ್ಯಾಟ ಆಯೋಜನೆ ಮಾಡುವುದರಿಂದ ಯುವ ಕ್ರೀಡಾಭಿಮಾನಿಗಳಿಗೆ ಬಹಳಷ್ಟು ಉತ್ತೇಜನ ನೀಡಿದೆ.ನಿರಂತರ ಸಾಗಲಿ ಎಂದು ಶುಭಹಾರೈಸಿದರು.


ಈ ಸಂದರ್ಭ ಕಂಬದಕೋಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ದೇವಾಡಿಗ,ಕರುಣಾಕರ ದೇವಾಡಿಗ,ಮಾಜಿ ಪಂಚಾಯತ್ ಸದಸ್ಯ ಗುರುರಾಜ ಹೆಬ್ಬಾರ್,ಉದ್ಯಮಿಗಳಾದ ಜಯಪ್ರಕಾಶ ಶೆಟ್ಟಿ,ಸುದರ್ಶನ ಶೆಟ್ಟಿ,ಶ್ರೀನಿವಾಸ ಶೆಟ್ಟಿ,ಶ್ರೀಬೊಬ್ಬರ್ಯ ಫ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದರು.ಆರ್.ಕೆ ಸಂಜೀವ ರಾವ್ ಮೆಮೋರಿಯಲ್ ಟ್ರೋಫಿ ಅಂಗವಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ನಿವೃತ್ತ ಶಿಕ್ಷಕ ಕರುಣಾಕರ ಶೆಟ್ಟಿ ಮತ್ತು ಸುರೇಂದ್ರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.ಪ್ರಶಾಂತ ಪೂಜಾರಿ ನಿರೂಪಿಸಿದರು.ರಾಘವೇಂದ್ರ ದೇವಾಡಿಗ ವಂದಿಸಿದರು.ಬೈಂದೂರು,ಕುಂದಾಪುರ ಮತ್ತು ಭಟ್ಕಳ ತಾಲೂಕಿನಿಂದ 20 ವಾಲಿಬಾಲ್ ತಂಡ ಭಾಗವಹಿದ್ದವು.ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

