ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರಕಾರ ಅನುದಾನ ನೀಡುತ್ತಿಲ್ಲ-ಶಾಸಕ ಗಂಟಿಹೊಳೆ ಆರೋಪ

ಕುಂದಾಪುರ:ಗ್ರಾಮಕ್ಕೆ ಅನುಕೂಲವಾಗುವಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರಕಾರ ಯಾವುದೆ ರೀತಿ ಅನುದಾನ ನೀಡುತ್ತಿಲ್ಲ ಹಾಗಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತೊಡಕಾಗಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಹಕ್ಲಾಡಿ ಗ್ರಾಮದ ಮಾಸ್ತಿಕಟ್ಟೆ ವೆಂಕಮ್ಮ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಬುಧವಾರ ನಡೆದ ಗ್ರಾಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸ ಕಾರ್ಯಗಳು ಹಾಗೂ ಗ್ರಾಮದ ಅಭಿವೃದ್ಧಿಗೆ ಯಾವ ರೀತಿ ಯೋಜನೆಗಳನ್ನು ಕೈಗೊಳ್ಳಬಹುದು ಎನ್ನುವುದರ ಬಗ್ಗೆ ಚರ್ಚಿಸಬೇಕಾದ ಅಗತ್ಯತೆ ಇದೆ.ಪಂಚಾಯಿತಿ ಮಟ್ಟದ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹಾರ ಮಾಡುವುದರಿಂದ ಸ್ಥಳೀಯರಿಗೆ ಅನುಕೂಲವಾಗುವುದರ ಜತೆಗೆ ಅವರ ಜೀವನ ಮಟ್ಟ ಕೂಡ ಸುಧಾರಿಸಲಿದೆ ಎಂದರು.
ಹಕ್ಲಾಡಿ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ದೇವಾಡಿಗ,ಉಪಾಧ್ಯಕ್ಷ ಸುಭಾಷ್ ಶೆಟ್ಟಿ ಹಾಗೂ ಸದಸ್ಯರು,ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷರು,ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.ನಾನಾ ರೀತಿಯ ಸಮಸ್ಯೆಗಳ ಕುರಿತು ಗ್ರಾಮಸ್ಥರು ಶಾಸಕರಿಗೆ ಅಹವಾಲುಗಳನ್ನು ನೀಡಿದರು.