ಬೈಂದೂರು ಕ್ಷೇತ್ರದಲ್ಲಿ ಒಂದು ಲಕ್ಷ ಲೀಡ್ ಮತಗಳಿಕೆಗೆ ಬಿಜೆಪಿ ಕಾರ್ಯತಂತ್ರ
ಕುಂದಾಪುರ:ನನ್ನ ಪೇಜ್ ನನ್ನ ಜವಾಬ್ದಾರಿ ವಿನೂತನ ಕಾರ್ಯಕ್ರಮ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬುಧವಾರ ನಡೆಯಿತು.

ಲೋಕಸಭಾ ಚುನಾವಣೆಗೆ ಭರ್ಜರಿಯಾಗಿ ಸಿದ್ಧತೆ ನಡೆಸುತ್ತಿರುವ ಬಿಜೆಪಿ ಬೈಂದೂರು ಮಂಡಲ ವಿಶೇಷ ಕಾರ್ಯಕ್ರಮಗಳ ಮೂಲಕ ಪಂಚಾಯತ್ ಮಟ್ಟದಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.
ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರು ನನ್ನ ಪೇಜ್ ನನ್ನ ಜವಾಬ್ದಾರಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ
ಮಾತನಾಡಿ,ನನ್ನ ಪೇಜ್ ನನ್ನ ಜವಾಬ್ದಾರಿ ಕಾರ್ಯಕ್ರಮವನ್ನು ನಿತ್ಯವೂ ಆಯಾ ಶಕ್ತಿ ಕೇಂದ್ರದಲ್ಲಿ ನಡೆಸಲಾಗುತ್ತದೆ. ಬೆಳಗ್ಗೆ ಅಥವಾ ಸಂಜೆ ಕಾರ್ಯಕ್ರಮ ನಡೆಸಿ ಅದರ ಅಪ್ಡೇಟ್ ಅಥವಾ ಫೋಟೊ ವನ್ನು ಮಂಡಲಕ್ಕೆ ಕಳುಹಿಕೊಡಬೇಕು ಎಂದು ಪ್ರಮುಖರಿಗೆ ತಿಳಿಸಿದರು.ಎಲ್ಲ ಬೂತ್ ಗಳಲ್ಲೂ ಪೇಜ್ ಪ್ರಮುಖರ ನೇಮಕ ಆಗಬೇಕು ಮತ್ತು ಅವರ ಜವಾಬ್ದಾರಿಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು. ನಂತರ ಅವರು ತಮ್ಮ ಜವಾಬ್ದಾರಿಗಳ ಬಗ್ಗೆ ಅರಿತು ಚುನಾವಣಾ ಕಾರ್ಯದಲ್ಲಿ ಸಕ್ರಿಯರಾಗಬೇಕು ಎಂದರು.
ಬೈಂದೂರು ವಿಧಾನಸಭಾ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ 1 ಲಕ್ಷಕ್ಕೂ ಅಧಿಕ ಲೀಡ್ ನೀಡಲು ಹಲವು ಕಾರ್ಯಕ್ರಮ ಹಮ್ಮಿಕೊಂಡು ಪ್ರಚಾರ ಪ್ರಕ್ರಿಯೆ ನಡೆಯುತ್ತಿದೆ.ಅದರ ಒಂದು ಭಾಗವಾಗಿ ನನ್ನ ಪೇಜ್ ನನ್ನ ಜವಾಬ್ದಾರಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂಬ ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ಸಂಚಾಲಕರಾದ ಆನಂದ ಖಾರ್ವಿ, ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಮಂಡಲ ಕಾರ್ಯದರ್ಶಿ ಮಹೇಂದ್ರ ಪೂಜಾರಿ, ಮಂಡಲ ಖಜಾಂಚಿ ಶ್ರೀಗಣೇಶ್ ಗಾಣಿಗ, ಮಂಡಲ ಉಪಾಧ್ಯಕ್ಷ ರಮೇಶ್ ಪೂಜಾರಿ, ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಜಗನ್ನಾಥ ಮೊಗವೀರ, ಪ್ರಮುಖರಾದ ನಾಗರಾಜ, ಕರುಣ ಪೂಜಾರಿ, ಉಪ್ಪುಂದ ಗ್ರಾಮ ಪಂಚಾಯತಿಯ 10 ಬೂತ್ ಅಧ್ಯಕ್ಷರು, ಪೇಜ್ ಪ್ರಮುಖರು, ಕಾರ್ಯಕರ್ತರು ಸಭೆಯಲ್ಲಿದ್ದರು.
