ಮರವಂತೆ:ಶ್ರೀನಾಗ ಶ್ರೀ ಅಜ್ಜಮ್ಮ ಪರಿವಾರ ದೇವರುಗಳ ನವೀಕೃತ ದೈವಾಲಯ ಲೋಕಾರ್ಪಣೆ

ಕುಂದಾಪುರ:ಬೈಂದೂರು ತಾಲೂಕಿನ ಮರವಂತೆ ನೀರೋಣಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀನಾಗ ಶ್ರೀ ಅಜ್ಜಮ್ಮ ಪರಿವಾರ ದೇವರುಗಳ ನವೀಕೃತ ದೈವಾಲಯ ಲೋಕಾರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಗುರುವಾರ ಸಂಪನ್ನಗೊಂಡಿತು.

ನವೀಕೃತ ದೈವಾಲಯದ ಪ್ರಯುಕ್ತ ಪಂಚವಿಂಶತಿ ಕಲಶ ಪ್ರತಿಷ್ಠೆ,ಪ್ರಧಾನಯಾಗ ಜರುಗಿತು.ಮೀನಲಗ್ನ ಸಮುಹೂರ್ತದಲ್ಲಿ ಶ್ರೀಅಜಮ್ಮ ಪರಿವಾರ ಶಕ್ತಿಗಳ ಸಾನಿಧ್ಯಾಭಿವೃದ್ಧಿಗೊಳಿಸಿ ಸಾನಿಧ್ಯ ಕಲಶಾಭಿಷೇಕ,ಪ್ರಸನ್ನ ಪೂಜೆ,ಪಲ್ಲಪೂಜೆ,ಮಹಾ ಅನ್ನಸಂತರ್ಪಣೆ,ಆಶ್ಲೇಷ ಬಲಿ,ಯಕ್ಷಗಾನ ಬಯಲಾಟ ಕಾರ್ಯಕ್ರಮ ನಡೆಯಿತು.

ಸೌಪರ್ಣಿಕಾ ನದಿ ಭಾಗದಲ್ಲಿ ನೆಲೆಸಿರುವ ಶ್ರೀನಾಗ ಶ್ರೀಅಜ್ಜಮ್ಮ ಪರಿವಾರ ಶಕ್ತಿಗಳ ದೈವಸ್ಥಾನಕ್ಕೆ ಪೌರಾಣಿಕ ಇತಿಹಾಸವಿದೆ.ಶ್ರೀಧರ ಸ್ವಾಮಿಗಳು ತಪಸ್ಸಿಗೆ ಕುಳಿತಿರುವ ಜಾಗವು ಇದಾಗಿದ್ದು ಪುಣ್ಯ ಭೂಮಿಯಾಗಿದೆ.ಆರೂಢ ಪ್ರಶ್ನೆಯಲ್ಲಿ ತಿಳಿದು ಬಂತಂತಹ ವಿಚಾರದ ಮೂಲಕ ಬೆಂಗಳೂರು ಹೊಟೇಲ್ ಉದ್ಯಮಿ ಯಾಗಿರುವ ಎನ್.ರವೀಂದ್ರ ಹೆಬ್ಬಾರ್ ಮರವಂತೆ ಅವರು ಮುಂದಾಳತ್ವ ವಹಿಸಿಕೊಂಡು ಊರಿನವರ ಸಹಕಾರದಿಂದ ಅರ್ಜೀಣಾವಸ್ಥೆಯಲ್ಲಿರುವ ಪುರಾತನ ದೈವಾಲಯವನ್ನು ನಿರ್ಮಿಸಿದ್ದಾರೆ.ದೇವಾಲಯದ ನಿರ್ಮಾಣಕ್ಕೆ ಮರವಂತೆ ದೇವಾಡಿಗ ಕುಟುಂಬಸ್ಥರು ಜಾಗವನ್ನು ಬಿಟ್ಟು ಕೊಡುವುದರ ಮೂಲಕ ನೂತನ ದೈವಾಲಯದ ನಿರ್ಮಾಣದ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ಊರಿನ ಹಿರಿಯರಾದ ವಿನಾಯಕ ರಾವ್ ಮಾತನಾಡಿ,ಸುಮಾರು 60 ವರ್ಷಗಳಿಂದ ಅಜೀರ್ಣವಸ್ಥೆಯಲ್ಲಿರುವ ದೇವಾಲಯ ಇಂದು ಲೋಕಾರ್ಪಣೆ ಗೊಂಡಿರುವುದು ಬಹಳಷ್ಟು ಖುಷಿ ಕೊಡುವಂತಹ ವಿಚಾರವಾಗಿದೆ.ಶ್ರೀಧರ ಸ್ವಾಮಿಗಳು ತಪಸ್ಸನ್ನು ಆಚರಿಸಿದ ಪುಣ್ಯ ಭೂಮಿಗೆ ಇಂದು ತುಂಬು ಚೈತನ್ಯ ದೊರಕುವುದರ ಜತೆಗೆ ಶ್ರೀನಾಗ ಶ್ರೀ ಅಜ್ಜಮ್ಮ ಸಹಿತ ಪರಿವಾರ ಶಕ್ತಿ ದೈವರುಗಳ ಪ್ರತಿಷ್ಠಾಪನೆ ಕೂಡ ಆಗಿರುವುದರಿಂದ ಊರಿಗೆ ಮತ್ತು ಜಗತ್ತಿಗೆ ಒಳಿತಾಗಲಿದೆ ಎಂದು ಹೇಳಿದರು.

ದೈವಾಲಯದ ನಿರ್ಮಾಣದ ಕಾರ್ಯದಲ್ಲಿ ತೊಡಗಿಕೊಂಡಿರುವ ಪ್ರಮುಖರಾದ ಗೋಪಾಲ ದೇವಾಡಿಗ ಮರವಂತೆ ಮಾತನಾಡಿ,ಕಾಡಿನ ಮಧ್ಯೆ ಹುಲ್ಲಿನಿಂದ ಕೂಡಿದ ದೈವಸ್ಥಾನ ಇರುವುದು 60 ವರ್ಷಗಳಿಂದ ನೋಡಿಕೊಂಡು ಬರಲಾಗುತ್ತಿದೆ.ಪ್ರಶ್ನಾ ಚಿಂತನಾ ಕಾರ್ಯದ ಮೂಲಕ ಅರ್ಜೀಣಾವಸ್ಥೆಯಲ್ಲಿದ್ದ ದೈವಾಲಯವನ್ನು ಸ್ಥಳದ ಭಕ್ತರಾದ ಬೆಂಗಳೂರು ಹೋಟೆಲ್ ಉದ್ಯಮಿ ಎನ್.ರವೀಂದ್ರ ಹೆಬ್ಬಾರ್ ಅವರ ಮುಂದಾಳತ್ವದಲ್ಲಿ,ಗ್ರಾಮಸ್ಥರ ಸಹಕಾರದಿಂದ ನವೀಕೃತ ದೈವಾಲಯದ ಪ್ರತಿಷ್ಠಾ ಮಹೋತ್ಸವ ಕಾರ್ಯ ವಿಜೃಂಭಣೆಯಿಂದ ನಡೆಯಿತು ಎಂದರು.ಇವೊಂದು ಪುಣ್ಯ ಕಾರ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಿದರು.

ಸ್ಥಳದಾನವನ್ನು ಮಾಡಿರುವ ಪುಟ್ಟು ಕಾಡಿಮನೆ ಮರವಂತೆ ಕುಟುಂಬದ ಸದಸ್ಯರಾದ ಸಂತೋಷ ದೇವಾಡಿಗ ಮಾತನಾಡಿ,ಕಳೆದ 60 ವರ್ಷಗಳಿಂದ ಇವೊಂದು ದೈವಸ್ಥಾನ ಶಿಥಿಲಾವಸ್ಥೆಗೆ ತಲುಪಿದ್ದು ದಾನಿಗಳ ಸಹಕಾರ ಮತ್ತು ಭಕ್ತರ ಭಕ್ತಿಯಿಂದ ನೂತನ ದೈವಾಲಯ ನಿರ್ಮಾಣಗೊಂಡಿದೆ.ಶೃದ್ಧೆ ಮತ್ತು ಭಕ್ತಿಯಿಂದ ದೈವಾಲಯದ ನಿರ್ಮಾಣಕ್ಕೆ ಬೇಕಾದಷ್ಟು ಜಾಗವನ್ನು ನೀಡಲಾಗಿದೆ ಎಂದು ಹೇಳಿದರು.ದೇವರ ಜಾಗವನ್ನು ದೇವರಿಗೆ ನೀಡಿರುವುದು ಬಹಳಷ್ಟು ಖುಷಿ ಕೊಟ್ಟಿದೆ ಎಂದರು.ಈ ಸಂದರ್ಭ ಗ್ರಾಮಸ್ಥರು ಉಸ್ಥಿತರಿದ್ದರು.

ವರದಿ:ಜಗದೀಶ ದೇವಾಡಿಗ ಮುಳ್ಳಿಕಟ್ಟೆ