ಬಿಜೆಪಿ ಪಕ್ಷದ ಮಾಜಿ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ,ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ
![](https://kundapurtimes.com/wp-content/uploads/2023/09/WhatsApp-Image-2023-09-07-at-12.53.59-PM.jpeg)
ಕುಂದಾಪುರ:ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದರು.
ಬಿಜೆಪಿ ಪಕ್ಷದ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಅವರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿರುವುದು ಕರಾವಳಿ ಭಾಗದಲ್ಲಿ ತೀವೃ ಕುತೂಹಲ ಮೂಡಿಸಿದೆ.2023 ರ ವಿಧಾನ ಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಮೂರನೇ ಬಾರಿಗೆ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ.ಎಂ ಸುಕುಮಾರ ಶೆಟ್ಟಿ ಅವರಿಗೆ ಕೊನೆ ಕ್ಷಣದಲ್ಲಿ ಬಿಜೆಪಿ ಪಕ್ಷದ ಹೈಕಾಮಾಂಡ್ ಟಿಕೆಟ್ ನಿರಾಕರಿಸಿ ಸಂಘದ ನಿಷ್ಠಾವಂತ ಕಾರ್ಯಕರ್ತ ಗುರುರಾಜ್ ಗಂಟಿಹೊಳೆಗೆ ನೀಡಿದ್ದರು.ಎಂಎಲ್ಎ ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಅವರು ಪಕ್ಷದ ಅಭ್ಯರ್ಥಿ ಪರ ಚುನಾವಣೆ ಪ್ರಚಾರಕ್ಕೆ ತೆರಳದೆ ತಟಸ್ಥ ನಿಲುವನ್ನು ತಾಳಿದ್ದರು.ಇತ್ತೀಚಿನ ದಿನಗಳಲ್ಲಿ ಬಿಜೆಪಿಯಿಂದ ಅಂತರವನ್ನು ಕಾಯ್ದು ಕೊಂಡಿದ್ದ ಬಿ.ಎಂ ಸುಕುಮಾರ್ ಶೆಟ್ಟಿ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆ ಎನ್ನುವ ವಿಚಾರ ಕ್ಷೇತ್ರಾದ್ಯಂತ ಸುದ್ದಿ ಆಗಿತ್ತು.ಕೆಪಿಸಿಸಿ ಅಧ್ಯಕ್ಷರನ್ನು ಮಾಜಿ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಅವರು ಭೇಟಿ ಮಾಡಿರುವುದು ಆಪರೇಷನ್ ಹಸ್ತಕ್ಕೆ ಪುಷ್ಟಿ ನೀಡಿದೆ.ಲೋಕಾಸಭೆ ಚುನಾವಣೆ ಹತ್ತಿರ ವಾಗುತ್ತಿರುವ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಘಟಾನುಘಟಿ ನಾಯಕರುಗಳು ಕಾಂಗ್ರೆಸ್ ಪಕ್ಷದ ಕಡೆಗೆ ಮುಖ ಮಾಡಿರುವುದು ಬಿಜೆಪಿ ಪಕ್ಷಕ್ಕೆ ಸಂಕಷ್ಟವನ್ನು ತಂದೊಡ್ಡಿದೆ.ಆಪರೇಷನ್ ಹಸ್ತ ಕರಾವಳಿ ಭಾಗದಿಂದ ಆರಂಭವಾಗುವ ಸಂಶಯ ರಾಜ್ಯ ರಾಜಕಾರಣದಲ್ಲಿ ಗೋಚರವಾದಂತ್ತಿದೆ.