ಸರಕಾರಿ ಕಿರಿಯ ಪ್ರಾಥಮಿಕ ಕೋಯಾನಗರ ಶಾಲೆ ನಾವುಂದ,ಸುವರ್ಣ ಮಹೋತ್ಸವ ಸಂಭ್ರಮ

ಕುಂದಾಪುರ:ಬೈಂದೂರು ತಾಲೂಕಿನ ನಾವುಂದ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಕೋಯಾನಗರ ಶಾಲೆಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಶನಿವಾರ ನಡೆಯಿತು.ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಸಿಂಚನ ಕಾರ್ಯಕ್ರಮ ಮತ್ತು ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮ ಸೇರಿದಂತೆ ನಾಟಕ ಪ್ರದರ್ಶನ ನಡೆಯಿತು.ಶಾಲೆಗೆ ಕೊಡುಗೆ ನೀಡಿರುವ ದಾನಿಗಳನ್ನು,ಅಡುಗೆ ಸಹಾಯಕರನ್ನು, ಶಿಕ್ಷಕರನ್ನು ಗೌರವಿಸಲಾಯಿತು.

ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಮಾತನಾಡಿ,ಒಂದು ವಿಶಿಷ್ಟವಾದ ಕಲ್ಪನೆಯೊಂದಿಗೆ ಆರಂಭಗೊಂಡ ನಾವುಂದ ಗ್ರಾಮದ ಕೋಯಾನಗರ ಬೈಂದೂರು ಕ್ಷೇತ್ರದಲ್ಲಿ ಮಾದರಿ ಶಾಲೆಯಾಗಿ ಗುರುತಿಸಿ ಕೊಂಡಿದೆ ಎಂದು ಹೇಳಿದರು.
ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಆಂಗ್ಲ ಮಾಧ್ಯಮ ಶಾಲೆ ಭರಾಟೆಯಿಂದ ಇಂದು ಕನ್ನಡ ಮಾಧ್ಯಮ ಶಾಲೆಗಳು ಬಾಗಿಲು ಹಾಕುವಂತಹ ಪರಿಸ್ಥಿತಿಗೆ ಬಂದು ತಲುಪಿದೆ.ಬದಲಾದ ವ್ಯವಸ್ಥೆಯಲ್ಲಿ ದಾನಿಗಳು ಮತ್ತು ಊರಿನ ಗ್ರಾಮಸ್ಥರ ಸಹಕಾರದಿಂದ ಸರಕಾರಿ ಶಾಲೆಗಳು ಬೆಳಕನ್ನು ಕಾಣುವಂತೆ ಆಗಿದೆ ಎಂದರು.

ಶಾಲೆಯನ್ನು ದತ್ತು ಸ್ವೀಕಾರ ಮಾಡಿರುವ ದಾನಿಗಳಾದ ಜಗದೀಶ್ ಶೆಟ್ಟಿ ಕುದ್ರುಕೋಡು ಅವರು ವಿದ್ಯ ಪೋಷಕ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿ,ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಸೀಗಬೇಕು ಎನ್ನುವ ದೃಷ್ಟಿಯಿಂದ ಶಾಲೆಯನ್ನು ದತ್ತು ಸ್ವೀಕಾರ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿಯೂ ಶಾಲೆ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ ಮಾತನಾಡಿ,ಶಾಲೆಯ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ವತಿಯಿಂದ ಸಹಕಾರ ನೀಡಲಾಗುವುದು, ದಾನಿಗಳನ್ನು ಸಂಪರ್ಕಿಸಿ ಊರಿನಲ್ಲಿರುವ ಶಾಲೆಗಳನ್ನು ದತ್ತು ಸ್ವೀಕಾರ ಮಾಡುವಂತೆ ಉದ್ಯಮಿಗಳನ್ನು ಸಂಪರ್ಕಿಸಲಾಗುದೆಂದು ಹೇಳಿದರು.
ಉದ್ಯಮಿ ನಗು ಗ್ರೂಪ್ ಕುಶಲ ಶೆಟ್ಟಿ ಮಾತನಾಡಿ,ಈ ಶಾಲೆಯಲ್ಲಿ ಓದಿದ ಬಹಳಷ್ಟು ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶ ವಿದೇಶಗಳಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ,ಪ್ರಾಥಮಿಕ ಶಿಕ್ಷಣ ಬದುಕಿಗೆ ಒಳ್ಳೆ ಚೌಕಟ್ಟನ್ನು ಒದಗಿಸಿ ಕೊಡುತ್ತದೆ ಎಂದು ನುಡಿದರು.

ಕೆ.ಶ್ರೀನಿವಾಸ ಶೆಟ್ಟಿ ಮಾತನಾಡಿ,ವಿದ್ಯಾರ್ಥಿಗಳು ತ್ಯಾಗದ ಮನೋಭಾವ ಹೊಂದಿದಾಗ ಮಾತ್ರ ಯಶಸ್ಸನ್ನು ಹೊಂದ ಬಹುದು ಎಂದು ಹೇಳಿದರು.

ಸುಧಾಕರ ದೇವಾಡಿಗ,ಮಾಜಿ ತಾ.ಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಜಗದೀಶ್ ಪೂಜಾರಿ, ತೌಫಿಕ್,ಅಂದುಕಾಯಿ,
ಮಹಾಬಲ ಕುಂದರ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ ಪೂಜಾರಿ,
ದೈಹಿಕ ಪರಿವೀಕ್ಷಣಾ ಧಿಕಾರಿ ಚಂದ್ರಶೇಖರ ಶೆಟ್ಟಿ, ಸೈಯದ್ ಜಾಫರ್ ಕೋಯಾ, ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ ಕುಮಾರ್ ಶೆಟ್ಟಿ ಕುದ್ರುಕೋಡು,
ಎಸ್.ಜಿ.ಬಿ ಅಬ್ಬಾಸ್, ಪಂಚಾಯತ್ ಸದಸ್ಯರಾದ ಗಣೇಶ್ ಪೂಜಾರಿ, ಪ್ರಮೋದ್, ಎಸ್ ಡಿ ಎಂ ಸಿ ಅಧ್ಯಕ್ಷ ಸುಬ್ರಹ್ಮಣ್ಯ ಖಾರ್ವಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಎಮ್ ಇಲಿಯಾಸ್, ಶಾಲಾ ನಾಯಕಿ ಇಫ್ರಾ ಉಪಸ್ಥಿತರಿದ್ದರು.
ಶಿಕ್ಷಕ ಸುನೀಲ್ ಶೆಟ್ಟಿ ಸ್ವಾಗತಿಸಿದರು.ಮುಖ್ಯ ಶಿಕ್ಷಕಿ ಲಲಿತಾ ಎಂ ವರದಿ ವಾಚಿಸಿದರು.ಶಿಕ್ಷಕ ವಿಶ್ವನಾಥ ಶೆಟ್ಟಿ ನಿರೂಪಿಸಿದರು.