ಕೃಷಿ -ತೋಟಗಾರಿಕೆ,ಅರಣ್ಯ ಕಾನೂನು ಮಾಹಿತಿ ಶಿಬಿರ ಉದ್ಘಾಟನೆ



ಕುಂದಾಪುರ:ಕುಂದಬಾರಂದಾಡಿ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿ,ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಅವರ ಸಂಯುಕ್ತ ಆಶ್ರಯದಲ್ಲಿ ಕೃಷಿ ತೋಟಗಾರಿಕೆ ಮಾಹಿತಿ ಶಿಬಿರ ಹಾಗೂ ಅರಣ್ಯ ಕಾನೂನು ಮಾಹಿತಿ ಕಾರ್ಯಕ್ರಮ ಕುಂದಬಾರಂದಾಡಿ ಮೂಡಾರೆ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಶನಿವಾರ ನಡೆಯಿತು.
ಉಡುಪಿ ಜಿಲ್ಲೆಯ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಗ್ರಾಮೀಣ ಭಾಗದಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳು ರೈತರಿಗೆ ಬಹಳಷ್ಟು ಉಪಯೋಗವಾಗಲಿದೆ.ರೈತರು ಒಂದೇ ಬೆಳೆಗೆ ಮಾರು ಹೋಗದೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮ ಆದಾಯ ಗಳಿಸಲು ಮುಂದಾಗಬೇಕು ಎಂದರು.
ಹಿರಿಯ ವಿಜ್ಞಾನಿ ಧನಂಜಯ ಬಿ ಅವರು ಕೃಷಿ ಮತ್ತು ತೋಟಗಾರಿಕೆ ಮಾಹಿತಿ ನೀಡಿ ಮಾತನಾಡಿ,
ಮಿಶ್ರ ಬೆಳೆಗೆ ಹೆಚ್ಚಿನ ಒತ್ತನ್ನು ನೀಡಿದಾಗ ಮಾತ್ರ ಉತ್ತಮ ಆದಾಯ ಗಳಿಸ ಬಹುದಾಗಿದೆ ಎಂದರು.ತೆಂಗು, ಅಡಿಕೆ ಕೃಷಿ ಜತೆಗೆ ಮಿಶ್ರ ಬೆಳೆಗಳಾದ ಕಾಳುಮೆಣಸು,ಬಾಳೆ,ಸುವರ್ಣ ಗಡ್ಡೆ, ಜಾಯಿಕಾಯಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಹೇಳಿದರು.
ಕುಂದಬಾರಂದಾಡಿ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿ ಅಧ್ಯಕ್ಷ ಅನಂತಪದ್ಮನಾಭ ಉಡುಪ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,ಕೃಷಿ ಮತ್ತು ತೋಟಗಾರಿಕೆ ಮಾಹಿತಿ ಶಿಬಿರದಿಂದ ನೂರಾರು ರೈತರಿಗೆ ಉಪಯುಕ್ತವಾದ ಮಾಹಿತಿ ದೊರೆತಿದೆ.ಮುಂದಿನ ದಿನಗಳಲ್ಲಿ ನಮ್ಮ ಸೊಸೈಟಿ ಯಿಂದ ತೆಂಗಿನ ಚಿಪ್ಸ್ ಮಾಡುವ ಯೋಜನೆ ರೂಪಿಸಲಾಗಿದ್ದು,ಸೊಸೈಟಿ ಸದಸ್ಯರೆಲ್ಲರೂ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಕೀಟಶಾಸ್ತ್ರ ತಜ್ಞರಾದ ಡಾ.ರೇವಣ್ಣ ರೇವಣ್ಣವರ್ ಅವರು ಕೀಟನಾಶಕ ಮತ್ತು ಮಂಗನ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಹಕ್ಲಾಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಗಣಪಯ್ಯ ಶೆಟ್ಟಿ,ಉ.ಕಾ.ಸ ಅಧ್ಯಕ್ಷರಾದ ಸತ್ಯನಾರಾಯಣ ಉಡುಪ, ಭಾರತೀಯ ಕಿಸಾನ್ ಸಂಘ ಕುಂದಾಪುರ ಅಧ್ಯಕ್ಷ ಸೀತಾರಾಮ ಗಾಣಿಗ,ತೆಂಗು ಉತ್ಪಾದಕರ ಫೆಡರೇಶನ್ ಕುಂದಾಪುರ ನಾರಾಯಣ ಶೆಟ್ಟಿ, ಹಕ್ಲಾಡಿ ಪಂಚಾಯತ್ ಅಧ್ಯಕ್ಷೆ ಪ್ರೇಮಾ ದೇವಾಡಿಗ ಉಪಸ್ಥಿತರಿದ್ದರು.ಅನಂತಪದ್ಮನಾಭ ಉಡುಪ ಸ್ವಾಗತಿಸಿದರು,ಲ.ರಾಜೀವ ಶೆಟ್ಟಿ ಪ್ರಾರ್ಥಿಸಿದರು,ಕಿಶೋರ್ ಕುಮಾರ್ ಶೆಟ್ಟಿ ನಿರೂಪಿಸಿದರು.ಸಂಜೀವ ಬಿಲ್ಲವ ವಂದಿಸಿದರು.