ಭೂಮಿ ಹಕ್ಕಿಗಾಗಿ ಕೊರಗ ಕುಟುಂಬಗಳಿಂದ ಅನಿರ್ದಿಷ್ಟಾವಧಿ ಮುಷ್ಕರ
ಕುಂದಾಪುರ:ಆಲೂರು ಗ್ರಾಮದಲ್ಲಿ ವಾಸವಾಗಿರುವ ಕೊರಗ ಕುಟುಂಬಗಳಿಗೆ ಡಾ. ಮಹಮ್ಮದ್ ಫಿರ್ ವರದಿ ಪ್ರಕಾರ ಭೂಮಿ ನೀಡಲು ಆಗ್ರಹಿಸಿ ಹಲವಾರು ಬಾರಿ ಮನವಿಯನ್ನು ಸಲ್ಲಿಕೆ ಮಾಡಿದ್ದರು ಇದುವರೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ,ಜಿಲ್ಲಾ ಸಂಘಟನಾ ಸಮಿತಿ ಉಡುಪಿ ವತಿಯಿಂದ ಆಲೂರು ಗ್ರಾಮ ಪಂಚಾಯಿತಿ ಎದುರು ಅನಿರ್ದಿಷ್ಟಾವಧಿ ಮುಷ್ಕರವನ್ನು ಸೋಮವಾರ ಮಾಡಲಾಯಿತು.
ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಮಾತನಾಡಿ,ಕೊರಗ ಕುಟುಂಬಗಳಿಗೆ ಎರಡನೇ ಹಂತದಲ್ಲಿ ಭೂಮಿ ಹಂಚಿಕೆ ಮಾಡಲು 10 ತಿಂಗಳು ಕಾಲಾವಕಾಶ ತೆಗೆದು ಕೊಂಡಿದ್ದರು ಇಲ್ಲಿ ತನಕ ಸರ್ವೇ ಕಾರ್ಯ ಮಾಡಿಲ್ಲ ಎಂದು ದೂರಿದರು.ಸರ್ವೇ ಕಾರ್ಯವನ್ನು ಮಾಡಲು ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ರಾಜು ಬೆಟ್ಟಿನ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿ,ಜಿಲ್ಲೆಯಲ್ಲಿ ದಲ್ಲಿತರು ಮತ್ತು ಆದಿವಾಸಿಗಳು ಭೂಮಿ ಹಕ್ಕಿಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಭೂ ಹೋರಾಟ ಸಮಿತಿ ರಚಿಸಿ ಜಿಲ್ಲೆಯಾದ್ಯಂತ ಖಾಲಿ ಇರುವ ಸರಕಾರಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡುವ ಮೂಲಕ ಭೂಮಿ ಹೋರಾಟವನ್ನು ವಿಶಿಷ್ಟ ರೀತಿಯಲ್ಲಿ ಮಾಡಲಿದ್ದೇವೆ ಎಂದರು.
ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತ್ತು.
ಧರಣಿ ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್ ,ಕಂದಾಯ ನಿರೀಕ್ಷಕರು,ಗ್ರಾಮ ಆಡಳಿತ ಅಧಿಕಾರಿ,ತಾಲೂಕು ಸರ್ವೇಯರ್,ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರ ಆಹ್ವಾಲು ಸ್ವೀಕರಿಸಿದರು.
ರಾಜ್ಯ ಸಮಿತಿ ಸದಸ್ಯ ಗಣೇಶ ಆಲೂರು,ಕೊರಗ ಸಮುದಾಯ ದ ಮುಖಂಡರಾದ ಮಹಾಬಲ ಕೋಟ,ಸುನೀತ ಪಡುಕೋಣೆ, ಕುಷ್ಟ ಯರುಕೋಣೆ, ನಾರಾಯಣ ಆಲೂರು, ಸುರೇಂದ್ರ ನಾರ್ಕಳಿ, ಮತ್ತು ಹರಿಶ್ಚಂದ್ರ ಬಿರ್ತಿ ಬ್ರಹ್ಮಾವರ, ಪ್ರಾಂತ ರೈತ ಸಂಘದ ಸಂಚಾಲಕ ರಾಜು ಪಡುಕೋಣೆ ಉಪಸ್ಥಿತರಿದ್ದರು.
ಕುಂದಾಪುರ ತಹಶೀಲ್ದಾರ್ ಅವರು ಭೂಮಿ ಗುರುತಿಸಿ ಸರ್ವೇ ಕಾರ್ಯ ಮಾಡುವ ಕುರಿತು ಸೂಕ್ತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹವನ್ನು ಸಂಘಟಕರು ಕೈ ಬಿಟ್ಟಿದ್ದಾರೆ.