ಗುಜ್ಜಾಡಿ:ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ ವಿರೋಧಿಸಿ ದಿಢೀರ್ ಪ್ರತಿಭಟನೆ
ಕುಂದಾಪುರ:ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನ ನೆಪದಲ್ಲಿ ಕಾರ್ಮಿಕ ಇಲಾಖೆವೂ ಕಾರ್ಮಿಕರ ಕಲ್ಯಾಣ ನಿಧಿಯಿಂದ 600 ಕೋಟಿ ಹಣವನ್ನು ಬಿಡುಗಡೆ ಮಾಡಿಕೊಂಡು ಖಾಸಗಿ ಆಸ್ಪತ್ರೆಗಳೊಂದಿಗೆ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಲು ಒಡಂಬಡಿಕೆ ಮಾಡಿಕೊಂಡಿದೆ.ಕಟ್ಟಡ ಕಾರ್ಮಿಕರಿಗೆ ಪ್ರಯೋಜನೆ ಆಗದಿರುವಂತಹ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಿ ಹಣ ದುರ್ಬಳಕೆ ಮಾಡುತ್ತಿದೆ ಎಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ ಕಲ್ಲೇಗಾರ ಆರೋಪಿಸಿದರು.
ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದಲ್ಲಿ ಮಂಗಳವಾರ ನಡೆದ ಕರ್ನಾಟಕ ಸರಕಾರ,ಕಾರ್ಮಿಕ ಇಲಾಖೆ ಮತ್ತು ಉಡುಪಿ ಖಾಸಗಿ ಆಸ್ಪತ್ರೆ ಸಹಭಾಗಿತ್ವದಲ್ಲಿ ನಡೆದ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರದ ವಿರುದ್ದ ಗುಜ್ಜಾಡಿ ಗ್ರಾಮ ಪಂಚಾಯಿತಿ ಎದುರುಗಡೆ ನಡೆದ ದಿಢೀರ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಮಿಕರ ಹೆಸರಿನಲ್ಲಿ ಆಯೋಜನೆ ಮಾಡುತ್ತಿರುವ ಅವೈಜ್ಞಾನಿಕ ಶಿಬಿರಗಳನ್ನು ನಿಲ್ಲಿಸಲು ಕಾರ್ಮಿಕ ಸಚಿವರು ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕುಂದಾಪುರ ತಾಲೂಕು ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ದೇವಾಡಿಗ ಮಾತನಾಡಿ,ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯವನ್ನು ಕಳೆದ ಎರಡು ವರ್ಷಗಳಿಂದ ಬಿಡುಗಡೆ ಮಾಡಿಲ್ಲ ಎಂದು ದೂರಿದರು.ಕೆಲಸದ ವೇಳೆಯಲ್ಲಿ ಗಾಯಗೊಂಡು ಕೆಲಸ ಮಾಡಲು ಅಸಾಧ್ಯವಾದ ಕಾರ್ಮಿಕರಿಗೆ ಭತ್ಯೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಗುಜ್ಜಾಡಿ ಗ್ರಾಮದ ಕಾರ್ಮಿಕ ಸಂಘದ ಅಧ್ಯಕ್ಷ ಶ್ರೀನಿವಾಸ ಪೂಜಾರಿ,ಕಾರ್ಯದರ್ಶಿ ಸಂತೋಷ ಮತ್ತು ಸದಸ್ಯರು,ಕಾರ್ಮಿಕರು ಉಪಸ್ಥಿತರಿದ್ದರು.