ವಾರಾಹಿ ನೀರಿಗಾಗಿ ಗ್ರಾಮ ಮಟ್ಟದಲ್ಲಿ ಜನಾಂದೋಲನಕ್ಕೆ ಪೂರ್ವ ತಯಾರಿ:ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ಸಭೆ

ಕುಂದಾಪುರ:ವಾರಾಹಿ ನದಿ ನೀರು ಯೋಜನೆ ಬೈಂದೂರು ಕ್ಷೇತ್ರದ ಜನರಿಗೆ ಸಮರ್ಪಕವಾಗಿ ದೊರಕಬೇಕ್ಕೆನ್ನುವ ನಿಟ್ಟಿನಲ್ಲಿ ಹಾಗೂ ಯೋಜನೆಯ ಲಾಭ ಯಶಸ್ವಿಯಾಗಿ ಜಾರಿಗೆ ತರಲು ಒತ್ತಾಯಿಸಿ ಹೋರಾಟವನ್ನು ನಡೆಸುವ ಸಲುವಾಗಿ ಬೈಂದೂರು ಕ್ಷೇತ್ರದ
ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ನೇತೃತ್ವದಲ್ಲಿ ಸಿದ್ದಾಪುರದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು.
ಶಾಸಕರು ಸಭೆಯನ್ನುದ್ದೇಶಿಸಿ ಮಾತನಾಡಿ,ರಾಜ್ಯ ಸರ್ಕಾರ ವಾರಾಹಿ ಯೋಜನೆ ಅನುಷ್ಠಾನದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಯೋಜನೆ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದರೂ ಬೈಂದೂರಿನ ಯಾವುದೇ ಗ್ರಾಮಕ್ಕೆ ಇದರ ಪ್ರಯೋಜನ ಆಗುತ್ತಿಲ್ಲ.ವಾರಾಹಿ ನೀರು ಬೈಂದೂರಿನ ಗ್ರಾಮಗಳ ರೈತರ ಕೃಷಿ ಚಟುವಟಿಕೆಗೆ ಸಿಗಬೇಕು. ಈ ನಿಟ್ಟಿನಲ್ಲಿ ಜನಾಂದೋಲನದ ಮಾದರಿಯಲ್ಲಿ ಹೋರಾಟ ನಡೆಸುವ ಅಗತ್ಯವಿದೆ ಎಂದರು.
ವಾರಾಹಿ ನೀರು ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಗೆ ಹೋಗುವಂತೆಯೇ ಬೈಂದೂರು ತಾಲೂಕಿಗೂ ಬರಬೇಕು.ಈ ನಿಟ್ಟಿನಲ್ಲಿ ಯೋಜನೆಯ ಸಮಗ್ರ ಅನುಷ್ಠಾನ ಆಗಬೇಕು. ಸಿದ್ದಾಪುರ ಏತ ನೀರಾವರಿ ಯೋಜನೆಯ ಕಾಮಗಾರಿಗೂ ವೇಗ ಸಿಗಬೇಕು.ವಾರಾಹಿ ಎಡದಂಡೆ ಯೋಜನೆಯ ಅನುಷ್ಠಾನದ ಮೂಲಕ ಕಾಲುವೆಗಳಿಂದ ಬೈಂದೂರಿನ ಗ್ರಾಮಗಳಿಗೆ ವಾರಾಹಿ ನೀರು ಪೂರೈಕೆ ಆಗಬೇಕು.ಈ ಹಿನ್ನೆಲೆಯಲ್ಲಿ ಈ ಹೋರಾಟ ರೂಪಿಸಲಾಗುತ್ತಿದೆ ಎಂದರು.
ಆಗಸ್ಟ್ 15ರ ನಂತರ ಬೃಹತ್ ಹೋರಾಟ ಅಥವಾ ಜಾನಾಂದೋಲನ
ಆರಂಭದಲ್ಲಿ ಪ್ರತಿ ಗ್ರಾಮದಲ್ಲೂ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ವಾರಾಹಿ ಯೋಜನೆಯಡಿ ಬೈಂದೂರಿಗೆ ಆಗಿರುವ ಅನ್ಯಾಯ, ನಿರ್ಲಕ್ಷ್ಯದ ಬಗ್ಗೆ ಮಾಹಿತಿ ನೀಡಲಾಗುವುದು. ಆ.15 ರ ನಂತರ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಹೋರಾಟ ಅಥವಾ ಜನಾಂದೋಲನ ನಡೆಸಲಾಗುವುದು. ಕಾಲುವೆಗಳ ಮೂಲಕ ಬೈಂದೂರಿನ ಗ್ರಾಮಗಳಿಗೆ ವಾರಾಹಿ ನೀರು ಒದಗಿಸುವುದು, ವಾರಾಹಿ ಎಡದಂಡೆ ಯೋಜನೆ ಮತ್ತು ಸಿದ್ದಾಪುರ ಏತ ನೀರಾವರಿ ಯೋಜನೆ ಶಕ್ತಿ ತುಂಬುವುದು ಇದರ ಉದ್ದೇಶವಾಗಿದೆ.
ಜಿಲ್ಲೆಯ ಕಾಪು,ಕಾರ್ಕಳ, ಹೇಳಿ ಹೆಬ್ರಿ,ಉಡುಪಿ,ಉಡುಪಿ ನಗರಕ್ಕೆ ವಾರಾಹಿ ನೀರು ನೀಡುವ ಯೋಜನೆ ಜಾರಿಯಲ್ಲಿದೆ.ಆದರೆ ಬೈಂದೂರು ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಈ ಯೋಜನೆಯ ಪೂರ್ಣ ಅನುಕೂಲ ಬೈಂದೂರು ಕ್ಷೇತ್ರದ ಜನತೆಗೂ ಆಗಬೇಕು ಎನ್ನುವ ನಿಟ್ಟಿನಲ್ಲಿ ಹೋರಾಟ ಸಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು,ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಪ್ರಮುಖರಾದ ಉಮೇಶ್ ಕಲ್ಗದ್ದೆ, ಸತೀಶ್ ಶೆಟ್ಟಿ, ಡಾ. ಅತುಲ್ ಕುಮಾರ್ ಶೆಟ್ಟಿ, ಪ್ರಾಣೇಶ್, ರವಿಶೆಟ್ಟಿ, ರೋಹಿತ್ ಕುಮಾರ್ ಶೆಟ್ಟಿ, ಪ್ರಭಾಕರ ಕುಲಾಲ್, ಹಟ್ಟಿಯಂಗಡಿ ರಾಜೀವ್ ಶೆಟ್ಟಿ, ಹಕ್ಲಾಡಿ ಶುಭಾಶ್ ಶೆಟ್ಟಿ, ಹರ್ಕುರು ಮಂಜಯ್ಯ ಶೆಟ್ಟಿ, ಹರ್ಷ ಮೊಗವೀರ ಸಿದ್ದಾಪುರ, ಕೃಷ್ಣ ಪೂಜಾರಿ, ರವಿ ಕುಲಾಲ್ ಸೇರಿದಂತೆ ಸುಮಾರು 25 ಗ್ರಾಮ ಪಂಚಾಯತಿಗಳ ಮುಖಂಡರು ಭಾಗವಹಿಸಿ, ಯೋಜನೆಯ ಬಗ್ಗೆ ಸಮಗ್ರ ಚರ್ಚೆ ನಡೆಸಿದ್ದಾರೆ.